ಶುಕ್ರವಾರ ೩೦ ಅಕ್ಟೋಬರ್ ೨೦೦೯

ತುಳಸೀ ಪೂಜೆ

ಶ್ರೀ ತುಳಸೀ ಜಯ ತುಳಸೀ,

ಕಾಯೇ ನೀ ಅನವರತ, ಪರಿಪಾಲಿಸೇ


ನೀನಿರುವ ಅಂಗಳ,ಆ ಮನೆಗೆ ಮಂಗಳ

ಆನಂದದಿಂಗಳ ನಗೆಯ ಬೆಳದಿಂಗಳ

ನಿನ್ನಿಂದ ಇಹವು,ನಿನ್ನಿಂದ ಪರವು

ಸೌಭಾಗ್ಯವತಿಯರಿಗೆ ಪರಮ ಪಾವನವು


ನೀನಿಲ್ಲದ ಪೂಜೆಯು ಆ ಹರಿಗೆ ತ್ಯಾಜ್ಯವು

ನಿನ್ನ ಸ್ಪರ್ಶವಿಲ್ಲದೆ ನೈವೇದ್ಯವು ವ್ಯರ್ಥವು

ನೀನಿರುವ ತಾಣವೇ ಶ್ರೀ ಕೃಷ್ಣನ ವಾಸವು

ನಿನ್ನ ಆರಾಧನೆಯೇ ಜನ್ಮ ಪಾವನವು

ಗುರುವಾರ ೨೨ ಅಕ್ಟೋಬರ್ ೨೦೦೯

ನಮ್ಮ ಹಬ್ಬ ಹೀಗಿತ್ತು.ನಿಮ್ಮ ಹಬ್ಬ ಹೇಗಿತ್ತು?

ದೀಪ, ಪೂಜೆ,ಹೊಸ ಬಟ್ಟೆ,ರುಚಿ ರುಚಿ ಊಟ,,,, ಎಲ್ಲವುಗಳೊಂದಿಗೆ, ಫೋನಿನಲ್ಲಿ ಕೇಳಿಸಿದ,,,,
ಭಾರತದಲ್ಲಿ ಸಿಡಿಯುತ್ತಿದ್ದ ಪಟಾಕಿಗಳ ಸದ್ದು,,,, ಹೀಗಿತ್ತು ನಮ್ಮ ಮನೆಯಲ್ಲಿ ದೀಪಾವಳಿ ಹಬ್ಬ.

ಶನಿವಾರ ೧೭ ಅಕ್ಟೋಬರ್ ೨೦೦೯

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಷಯಗಳು.

ಹೂವು ಬಳ್ಳಿಗೆ ದೀಪ
ಹಸಿರು ಬಯಲಿಗೆ ದೀಪ
ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ
ಮುತ್ತುಕಡಲಿಗೆ ದೀಪ
ಹಕ್ಕಿ ಗಾಳಿಗೆ ದೀಪ
ಗ್ರಹ ತಾರೆಗಳ ದೀಪ ಬಾನಿನಲ್ಲಿ.

ಬಲ್ಮೆ ತೋಳಿಗೆ ದೀಪ
ದುಡಿಮೆ ಬೆವರಿನ ದೀಪ
ಸಹನೆ ಅನುಭವ ದೀಪ ಬದುಕಿನಲ್ಲಿ
ಮುನಿಸು ಒಲವಿಗೆ ದೀಪ
ಉಣಿಸು ಒಡಲಿಗೆ ದೀಪ
ಕರುಣೆ ನಂದಾದೀಪ ಲೋಕದಲ್ಲಿ.

ತೋರಣದ ತಳಿರಲ್ಲಿ
ಹೊಸಿಲ ಹಣತೆಗಳಲ್ಲಿ
ಬಾಣ ಬಿರುಸುಗಳಲ್ಲಿ ನಲಿವು ಮೂಡಿ
ಕತ್ತಲೆಯ ಪುಟಗಳಲಿ
ಬೆಳಕಿನ ಅಕ್ಷರಗಳಲಿ
ದೀಪಗಳ ಸಂದೇಶ ಥಳಥಳಿಸಲಿ.

ಬೆಳಕಿನ ಅಸ್ತಿತ್ವವನೆ
ಅಣಕಿಸುವ ಕತ್ತಲೆಗೆ
ತಕ್ಕ ಉತ್ತರವಿಲ್ಲಿ ಕೇಳಿಬರಲಿ
ದೀಪಾವಳಿಯ ಜ್ಯೋತಿ
ಅಭಯ ಹಸ್ತವನೆತ್ತಿ
ಎಲ್ಲರಿಗೆ ಎಲ್ಲಕ್ಕೆ ಶುಭ ಕೋರಲಿ.

ರಚನೆ:-ಕೆ.ಎಸ್.ನರಸಿಂಹಸ್ವಾಮಿ.

ಶುಕ್ರವಾರ ೨ ಅಕ್ಟೋಬರ್ ೨೦೦೯

ಚಿರೋಟಿ ನಿನಗ್ಯಾರು ಸಾಟಿ?

ಚಿರೋಟಿ,,,,,,, ನಿಮ್ಮಲ್ಲಿ ಯಾರಿಗೆ ತಿಳಿದಿಲ್ಲ? ಎಲ್ಲರಿಗೂ ತಿಳಿದಿರುವಂಥದ್ದೆ.ಅಲ್ಲವೇ?
ಆದ್ರೂ,,,,,,,,,,, ಉಪಯೋಗವಾಗಬಹುದೇನೋ ಅಂತ ಕೆಲವು ಸಲಹೆಗಳು.

1.ಚಿರೋಟಿ ಮಾಡುವಾಗ ಒಂದರ ಮೇಲೆ ಒಂದರಂತೆ ಮಧ್ಯೆ ಸಾಟಿ ಹಚ್ಚುತ್ತಾ,,,,7 ಎಲೆ (ಚಪಾತಿ ತರಹ ಉದ್ದಿ ಇಟ್ಟುಕೊಂಡಿದ್ದು) ಹಾಕಬೇಕು.ಕಾರಣ,,,, ಚಿರೋಟಿ ನೀವು ಏಳು ಎಲೆಹಾಕಿದ್ರೆ ಹೇಳಿದಹಾಗೆ ಕೇಳ್ತೀನಿ ಅನ್ನುತ್ತಂತೆ:-).

2.ನಂತರ ಸುರುಳಿಯಾಗಿ ಸುತ್ತಿ ಮುಕ್ಕಾಲು ಅಥವಾ ಒಂದುಇಂಚು ಗಾತ್ರ ಕತ್ತರಿಸಿ,,,,ನಾಜೂಕಾಗಿ ಒಂದೇ ನಿಟ್ಟಿನಲ್ಲಿ ಉದ್ದಬೇಕು. ಉದ್ದುವಾಗ(ಲಟ್ಟಿಸು) ಹಿಂದೆ ಮುಂದೆ ಉದ್ದಿದರೆ ಪದರಗಳೆಲ್ಲಾ ಬಿಟ್ಟುಕೊಳ್ಳುತ್ತವೆ.

3.ಪೂರಿ ಕರಿಯುವಾಗ ಜಾಲರಿಯಲ್ಲಿ ಸ್ವಲ್ಪ ಒತ್ತಿದರೆ,,,,,,ಹೇಗೆ ಪೂರಿ ಹೊಟ್ಟೆ ಉಬ್ಬುತ್ತದೋ ಹಾಗೇ, ಚಿರೋಟಿ ಕರಿಯುವಾಗಲೂ ಜಾಲರಿಯಲ್ಲಿ ಸ್ವಲ್ಪ ಒತ್ತಬೇಕು. ಇಲ್ಲಿ ಚಿರೋಟಿಯ ಹೊಟ್ಟೆ ಉಬ್ಬದೇ,,,,, ಪದರಗಳು ಚೆನ್ನಾಗಿ ಬರುತ್ತವೆ. ತಪ್ಪಿ ಜೋರಾಗಿ ಒತ್ತಿದರೇ,,,,,,, ಚಿರೋಟಿ ಹೋಗಿ ಮುಂಬರುವ ದೀಪಾವಳಿಗೆ ಬಿಚ್ಚಿಕೊಂಡ ಭೂಚಕ್ರ ತಯಾರಾಗುತ್ತದೆ.

4.ಖುಷಿಯಿಂದ ಚಿರೋಟಿ ಮಾಡುವಾಗ,,,,,,,, ಖುಷಿಗೆ ತಕ್ಕಷ್ಟು ಬೆಣ್ಣೆ ಹಾಕದೇ,,,,,,, ರುಚಿಗೆ ತಕ್ಕಷ್ಟು ಹಾಕಿದ್ರೆ ಒಳಿತು.

ಚಿರೋಟಿಗೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಉದುರಿಸಿ ಮೆಲ್ಲುವಾಗ,,,,,,,ಜೊತೆಗೆ ಸ್ವಲ್ಪ ಕೋಡುಬಳೆ ಇದ್ದರೇ,,,,,
ಆ ರುಚಿಗೆ ಸಾಟಿಯಾರು?

ರವಿವಾರ ೨೭ ಸಪ್ಟೆಂಬರ್ ೨೦೦೯

ನವರಾತ್ರಿ

ವಿಜಯದಶಮಿ ಹಬ್ಬದ ಶುಭಾಶಯಗಳು.

ರವಿವಾರ ೨೬ ಜುಲೈ ೨೦೦೯

ನಾಗರಪಂಚಮಿ ಹಬ್ಬದ ಶುಭಾಶಯಗಳು.

ಪಂಚಮಿ ಬಂದೈತೇ ಸನಿಹಾಕ,
ಅಣ್ಣ ಬರಲೇ ಇಲ್ಲ ಕರಿಯಾಕ.
ನಮ್ಮಣ್ಣ ಬರಲೇ ಇಲ್ಲ ಕರಿಯಾಕ.

ಹೋದಾ ವರುಷಾ ಪಂಚಮಿಗೆ ಹೋದಾಗ,
ಗೆಳತ್ಯಾರು ಕೂಡಿಕೊಂಡು ಜೋಕಾಲಿ ಆಡುವಾಗ.
ಅಣ್ಣ ಮನೀಯ ಮುಂದೆ ನನ್ನ ಕರಕೊಂಡೂ,
ಜೋಕಾಲಿ ತೂಗುತಾ ನಿಂತುಕೊಂಡಾ.

ಜಾನಪದ ಗೀತೆ.

ಬುಧವಾರ ೨೨ ಜುಲೈ ೨೦೦೯

ವರ್ಷ ತುಂಬಿದ ಹರ್ಷದಲ್ಲಿ "ಸಾಟಿಯಾರು".

ಸರಿದುಹೋದ ದಿನಗಳಲ್ಲಿ 25 ನೇ ಪೋಸ್ಟ್ ತಲುಪಲಾಗದಿದ್ದರೂ,,,,,
365 ನೇ ದಿನವಂತೂ ತಲುಪಿದ್ದೇನೆ:-).
ಸಾಟಿಯಾರುಗೆ ಭೇಟಿಯಿತ್ತವರಿಗೆಲ್ಲಾ ನನ್ನ ಹೃತ್ಪೂರ್ವಕ ಧನ್ಯವಾದಗಳು.